ಮನಸೇ ಓ ಮನಸೇ ನೀ ನನ್ನ ಮಾತು ಕೇಳು
ಓಡದಿರು ಎಲ್ಲೆಲ್ಲೋ ನಿನಗ್ಯಾಕೆ ಇಂಥ ಗೀಳು
ಬೇಲಿ ಹಾಕಲಾರೆ ನಿನಗೆ ನೀಡಬೇಡ ಗೋಳು
ಹದ್ದು ಮೀರಿ ಹೋದರೆ ನೀ ನನ್ನ ಬದುಕು ಹಾಳು
ನೆನಪ ಬುತ್ತಿ ಬಿಚ್ಚಬೇಡ ಕಹಿಯ ಪಾಲೇ ಹಿರಿದಿದೆ
ಮರೆವು ಒಂದು ವರವಾಗಿದೆ ಭವಿತವ್ಯದ ಒಳಿತಿಗೆ
ಕಹಿ ನೆನಪ ಕರೆತಂದರೆ ಜೊತೆಗೆ ಕಹಿಯು ಬರುತಿದೆ
ನಿನ್ನೆಗಳ ಗೊಡವೆ ಬೇಡ ಬರುವ ನಾಳೆ ಕಾದಿದೆ
ಯಾರ ಮನಸ ತಟ್ಟದಿರು ನೀ ಯಾರ ಹೃದಯ ಮುಟ್ಟದಿರು
ಯಾರೂ ನಿನ್ನ ಮುಟ್ಟದಂತೆ ನೀ ಇನ್ನು ಗಟ್ಟಿಯಾಗಿರು
ಸಾಂತ್ವನವ ನೀಡುತಿರು ನನ್ನೆಲ್ಲ ನೋವಿನಲ್ಲು
ಕೈ ಬಿಡದೆ ನಡೆಸು ನೀ ನನ್ನೆಲ್ಲ ಸೋಲಿನಲ್ಲು
ಆಯ್ಕೆಗಳು ನಿನಗಿರಲಿ ನಾ ನಿನ್ನೇ ನಂಬಿ ನಡೆವೆ
ದ್ವಂದ್ವಗಳ ತರಬೇಡ ಆಯ್ಕೆಗಳ ನಡುವೆ
ವಿಷಾದವೆಂದು ಬರದಿರಲಿ ಎಲ್ಲ ಮುಗಿದ ಮೇಲೆ
ಸನ್ಮಾರ್ಗದಿ ನಡೆಸೆನ್ನ ಭರವಸೆಯಿದೆ ನಿನ್ನ ಮೇಲೆ
ನೋವೆಲ್ಲ ಮರೆಸಿ ನೀ ನಲಿವುಗಳ ನೆನಪಿಡು
ದ್ವೇಷ ಹಟವನೆಲ್ಲ ಮರೆಸಿ ತಪ್ಪುಗಳ ಕ್ಷಮಿಸು
ವಿಕಾರವೆಲ್ಲ ತೊರೆದು ನೀ ಪ್ರೀತಿಯೊಂದೆ ಹಂಚು
ಜಗವನ್ನೇ ಗೆಲ್ಲುವ ವಿಶ್ವಾಸ ನನಗೆ ತುಂಬು
Saturday, October 11, 2008
Subscribe to:
Post Comments (Atom)
No comments:
Post a Comment